“ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ”, ಶಿವಮೊಗ್ಗ ಸಂಕ್ಷಿಪ್ತದಲ್ಲಿ “ಮಾಮ್ಕೋಸ್” ಎಂದೇ ಪ್ರಸಿದ್ಧ. ಅಂದಿನ ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿದ್ದ ಮಾನ್ಯ ಶ್ರೀ ಎಂ.ಶೇಷಾದ್ರಿಯವರ ಅಧ್ಯಕ್ಷತೆಯಲ್ಲಿ ಅಡಿಕೆ ಬೆಳೆಗಾರರ ಹಿತವನ್ನು ಕಾಯುವ ಉದ್ದೇಶದಿಂದ ಈ ಸಂಘವನ್ನು ಸ್ಥಾಪಿಸುವಾಗ (ದಿನಾಂಕ:08/11/1939 ರಂದು) ಕೇವಲ 659 ಜನ ಸದಸ್ಯರಿದ್ದು, 5121 ಮೂಟೆ ಮಾತ್ರ ಅಡಿಕೆ ಆವಕವಾಗಿತ್ತು. ರೂ.16,031 ಷೇರು ಬಂಡವಾಳದೊಂದಿಗೆ ಆರಂಭಗೊಂಡ ಸಂಘವು ಸ್ಥಾಪನೆಯ ವರ್ಷವೇ ರೂ.3,867 ನಿವ್ವಳ ಲಾಭ ಗಳಿಸಿ ಶೇ.6.25 ರಷ್ಟು ಡಿವಿಡೆಂಡ್ ನೀಡುವಲ್ಲಿ ಸಫಲವಾಯಿತು. ನಂತರ “ಮಾಮ್ಕೋಸ್” ಸಂಸ್ಥೆಯು ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದು, ಪ್ರಸ್ತುತ ಸುಮಾರು 27127 ಸದಸ್ಯರೊಂದಿಗೆ ಸದೃಢ ಆರ್ಥಿಕ ತಳಹದಿಯನ್ನು ಹೊಂದಿರುತ್ತದೆ. ಪ್ರಾರಂಭದಿಂದ ಇಲ್ಲಿಯವರೆಗೆ ಲಾಭದಲ್ಲೇ ಕಾರ್ಯ ನಿರ್ವಹಿಸುತ್ತಾ, ಪ್ರತಿ ವರ್ಷ ಡಿವಿಡೆಂಡ್ನ್ನು ನೀಡುತ್ತಿರುವ ಹೆಗ್ಗಳಿಕೆಯನ್ನು ಸಂಸ್ಥೆಯು ಹೊಂದಿರುತ್ತದೆ.
ಮುಖ್ಯ ಉದ್ದೇಶಗಳು:
ಸಂಘದ ಮುಖ್ಯ ಉದ್ದೇಶಗಳೆಂದರೆ, ಸದಸ್ಯರು, ಕೃಷಿಕರು ಬೆಳೆದ ಅಡಿಕೆ ಮತ್ತು ಇತರೆ ಉಪ ಬೆಳೆಗಳ ಮಾರಾಟಕ್ಕಾಗಿ ವ್ಯವಸ್ಥಿತವಾದ ಮಾರುಕಟ್ಟೆ ಸೌಲಭ್ಯ ಒದಗಿಸುವುದು, ಸದಸ್ಯರು ತಂದ ಉತ್ಪನ್ನಗಳಿಗೆ ಸುರಕ್ಷಿತ ಸಂಗ್ರಹಣೆ ಸೌಲಭ್ಯ ನೀಡುವುದು ಮತ್ತು ಅವರ ಅಪೇಕ್ಷೆಯಂತೆ ಒಪ್ಪಿದ ಬೆಲೆಗೆ ಮಾರಾಟ ಮಾಡುವುದು, ಕಟಾವು ಸಾಲ ನೀಡಿಕೆ, ತಂದ ಉತ್ಪನ್ನಗಳ ಮೇಲೆ ಮುಂಗಡ ಹಣ ಪಾವತಿಸುವುದು, ಸಂಸ್ಕರಣಾ ಚಟುವಟಿಕೆಗಳನ್ನು ಕೈಗೊಳ್ಳುವುದು, ಮುಂತಾದವುಗಳು.
ಆಡಳಿತ ವ್ಯಾಪ್ತಿ:
ಸಂಘವು ಶಿವಮೊಗ್ಗ, ಚಿಕ್ಕಮಗಳೂರು ಕಂದಾಯ ಜಿಲ್ಲೆಗಳ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಹೊನ್ನಾಳಿ ಕಂದಾಯ ತಾಲ್ಲೂಕುಗಳ ಒಟ್ಟು 16 ತಾಲ್ಲೂಕುಗಳ ಆಡಳಿತ ವ್ಯಾಪ್ತಿಯನ್ನು ಹೊಂದಿರುತ್ತದೆ.